’ಪ್ರಭಾತ್ಪೇರಿ’ ಗಾಗಿ, ನಾವು, ಓರಿಗೆಯವರೆಲ್ಲಾ, ಬೆಳಗಿನಿಂದ ಕಾದಿರುತ್ತಿದ್ದೆವು !

೧೯೪೪ ರಲ್ಲಿ, ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ನಾನು ಮತ್ತು ನನ್ನ ತಮ್ಮ ಚಂದ್ರ, ’ಪ್ರಭಾತ್ ಪೇರಿ ಮೆರವಣಿಗೆ ’ಯನ್ನು ಅತಿ ಹತ್ತಿರದಿಂದ ನೋಡಿದ ಪುಣ್ಯವಂತರು. ಆಗ ಎಲ್ಲರಲ್ಲೂ ದೇಶಭಕ್ತಿ, ದೇಶದ ಬಗ್ಗೆ ಅಪಾರಪ್ರೇಮ ಜಾಗೃತವಾಗಿದ್ದ ಕಾಲವದು. ಜನರೆಲ್ಲಾ ಸಾಧ್ಯವಾದಷ್ಟು ಉತ್ತಮವಾದ ನ್ಯಾಯಯುತವಾದ ಕೆಲಸಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬರುವ ಆದಾಯದಲ್ಲೇ ಹೆಚ್ಚು ಆಸೆಪಡದೆ ಜೀವನ ನಿರ್ವಹಣೆ ಮಾಡುತ್ತಿದ್ದ ಕಾಲ. ಅವರೆಲ್ಲಾ ಅಲ್ಪತೃಪ್ತರು. ತಮಗೆ ಬೇಕಾದಷ್ಟನ್ನು ಮಾತ್ರ ಉಪಯೋಗಿಸಿ ಯಾವ ವಸ್ತುವನ್ನೂ ಮನೆಯಲ್ಲಿ ಅತಿಯಾಗಿ ಶೇಖರಿಸದೆ ಸ್ವಚ್ಛ-ಜೀವನಾಪೇಕ್ಷಿಗಳಾಗಿದ್ದರು.
ನನಗೆ ಜ್ಞಾಪಕವಿದ್ದಂತೆ, ನನ್ನ ಬಾಲ್ಯದ ದಿನಗಳಲ್ಲೂ ಸ್ವಾತಂತ್ರ್ಯದಿನದಂದು, ಮತ್ತು ಗಣರಾಜ್ಯದಿನದಂದು,  ’ಮಹಾತ್ಮಾ ಗಾಂಧೀಕಿ ಜೈ’, ’ಭಾರತ್ ಮಾತಾಕಿ ಜೈ’ ಎನ್ನುವ ಕೂಗಿನಿಂದ ರಸ್ತೆಗಳಲ್ಲಿ ಬೆಳಗಿನ ವೇಳೆಯಲ್ಲಿ ಬರುವ ’ಪ್ರಭಾತ್ಪೇರಿ’  ಮೆರವಣಿಗೆಯನ್ನು ನಾವು ಕಾತುರದಿಂದ ವೀಕ್ಷಿಸಲು ಸಿದ್ದರಾಗುತ್ತಿದ್ದೆವು.  ಚಿಕ್ಕ ಪಲ್ಲಕ್ಕಿಯಲ್ಲಿ, ರಾಷ್ಟ್ರನಾಯಕರಾಗಿದ್ದ, ಬಾಲಗಂಗಾಧರ್ ತಿಲಕ್, ಗೋಪಾಲಕೃಷ್ಣ ರಾನಡೆ, ಬಾಬು ರಾಜೇಂದ್ರ ಪ್ರಸಾದ್, ಮತ್ತು ಜವಹರ್ ಲಾಲ್  ನೆಹರೂ ರವರ ಚಿತ್ರಪಟಗಳನ್ನಿಟ್ಟು ಅವಕ್ಕೆ ಹಾರಹಾಕುತ್ತಿದ್ದರು. ’ಹೊರಘೋಗಿ ನೋಡೋ ’ಪ್ರಭಾತ್ಪೇರಿ’ ಬಂತೇನೊ’ ಎಂದು ಕೆಲವು ಹಿರಿಯರು ಹಾಗೂ ನಮ್ಮಮ್ಮನೂ ಆಸಕ್ತಿತೋರಿಸಿದ ದಿನಗಳವು ! ಹಿಂದಿ ಭಾಷೆಯಲ್ಲಿ ’ಪ್ರಭಾತ್ ಫೇರಿ’ ಎನ್ನುವ ಪದ  ನಮ್ಮ ಕನ್ನಡಕ್ಕೆ ಬಂದಮೇಲೆ ಪ್ರಭಾತ್ಪೇರಿಯಾಗಿತ್ತು !
’ಪ್ರಭಾತ್ಪೇರಿ ಮೆರವಣಿಗೆ ’ಯ ಬಳಿಕ,  ಊರಿನ ’ಟೌನ್ ಹಾಲ್’ ’ ನಲ್ಲಿ ಗಣ್ಯರ ಭಾಷಣಗಳು ಇರುತ್ತಿದ್ದವು. ಪ್ರತಿಯೊಬ್ಬರೂ ತಾವು ಜೈಲುವಾಸ ಅನುಭವಿಸಿದ್ದರ ಅನುಭವಗಳನ್ನು ವಿಸ್ತಾರವಾಗಿ ಎಲ್ಲರಮುಂದೆ ಭಾಷಣ ಬಿಗಿಯುತ್ತಿದ್ದರು. ನಮ್ಮ ನಾರಾಯಣರಾಯರ ಹೋಟೆಲ್ ಬದಿಯಲ್ಲಿನ ಚಿಕ್ಕ ಕತ್ತಲುಕೋಣೆ,  ’ಪ್ರದೇಶ ಕಾಂಗ್ರೆಸ್  ಕಛೇರಿ ’ಯಾಗಿತ್ತು. ಅಲ್ಲಿ ಒಬ್ಬ ಕೆ. ಆರ್. ಪಂಡಿತರೆಂಬ ವ್ಯಕ್ತಿ, ಗಾಂಧಿಟೋಪಿ ಹಾಗಿಕೊಂಡು ಯಾವಾಗಲೂ ಕುಳಿತಿರುತ್ತಿದ್ದರು. ಇಂತಹ, ಸ್ವಾತಂತ್ರ್ಯದಿನದಂದು ಅವರು ಅತ್ಯಂತ ಆಸಕ್ತಿಯಿಂದ ಭಾಷಣ ತಯಾರುಮಾಡುವುದು, ಮತ್ತು ಚೆನ್ನಾಗಿ ಅದನ್ನು ಎಲ್ಲರ ಮುಂದೆ ಪ್ರಸ್ತುತಪಡಿಸುವುದು ಮಾಡುವುದನ್ನು ಕಂಡಾಗ, ನಮ್ಮ ಊರಿನ ಜನ, ಮತ್ತೆ ನಮ್ಮ ರಾಜಕೀಯ ಪುಢಾರಿಗಳು ಚೇತನಗೊಳ್ಳುವುದು  ಅಂತಹ ಸಂದರ್ಭಗಳು ಬಂದಾಗಲೇ,  ಎಂದು ನಗಾಡುತ್ತಿದ್ದರು. ಅದರ ಅರ್ಥವೇನೆಂದು ನಮಗೆ ತಿಳಿಯುತ್ತಿರಲಿಲ್ಲ. ಅಲ್ಲಿನ ಚಲನವಲನಗಳನ್ನು ನೋಡುವುದು, ಆಲಿಸುವುದು, ಬಿಟ್ಟರೆ ನಮಗೆ  ಯಾವುದೂ ಅರ್ಥವಾಗದೆ ಪಿಳಿ-ಪಿಳಿ ಕಣ್ಣುಬಿಡುತ್ತಾ ನಾಯಕರು  ಹೇಳದ್ದನ್ನು ಕೇಳಿ ಜೋರಾಗಿ ಚಪ್ಪಾಳೆ ಬಾರಿಸಿ, ಕೊನೆಯಲ್ಲಿ ವಿತರಿಸುತ್ತಿದ್ದ ಲಾಡುಉಂಡೆಯನ್ನು ನಿಧಾನವಾಗಿ ತಿನ್ನುತ್ತಾ ಮನೆಯ ಕಡೆ ಬರುತ್ತಿದ್ದೆವು.
ಮಹಾತ್ಮ ಗಾಂಧಿಯವರ ಬಗ್ಗೆ, ಸರ್ದಾರ್ ಪಟೇಲ್, ನೆಹರು, ರಾಜೇಂದ್ರ ಪ್ರಸಾದ್, ನೆಹರೂ ಇನ್ನೂ ಹಲವಾರು ವೀರನಾಯಕರ ಬಗ್ಗೆ ಕೇಳಲು, ನಮಗೆ ಎಲ್ಲಿಲ್ಲದ ಆಸಕ್ತಿ. ಮನೆಗೆ ಬಂದಮೇಲೂ ಹಿರಿಯರು, ಮತ್ತು ಅಪ್ಪ,ಅಮ್ಮಂದಿರು  ನಮಗೆ ಕೇಳುತ್ತಿದ್ದ ಪ್ರಶ್ನೆಗಳೆಂದರೆ, ಇಂದಿನ ಪ್ರಧಾನಿಯಾರು ? ರಾಷ್ಟ್ರದ  ಅಧ್ಯಕ್ಷ ರ‍್ಯಾರು, ನಮ್ಮ ಮೂರೂ ಸೈನ್ಯ ವಿಭಾಗದ ದಂಡನಾಯಕರ‍್ಯಾರು ಇತ್ಯಾದಿಗಳು.
ಸ್ವಾತಂತ್ರ್ಯ ಬಂದಮೇಲೂ ಕೆಲವು ವರ್ಷಗಳ ಕಾಲ ಈ ’ಪ್ರಭಾತ್ಪೇರಿ’ ವ್ಯವಸ್ಥೆ ಜಾರಿಯಲ್ಲಿತ್ತು. ಜನ ತಮಗೆ ಹೊಸದಾಗಿ ಬಂದ ಸ್ವಾಧೀನತೆಯನ್ನು ಯಾವ ಅರ್ಥವೂ ಆಗದಿದ್ದರೂ ಏನೋ ಸಮಾಧಾನ ಪಟ್ಟುಕೊಳ್ಳುತ್ತಿದ್ದ ಕಾಲವದು. ಸ್ವತಂತ್ರ್ಯಬರಕ್ಕೆ ಮೊದಲೂ ಈ ತರಹದ ಮೆರವಣಿಗೆಗಳು ಮೊದಲೂ ನಡೆಯುತ್ತಿದ್ದವು. ಆಗ ಬ್ರಿಟಿಷ್ ಸರಕಾರದ ಆಡಳಿತವಲ್ಲವೇ. ಆಂಗ್ಲರ ಅಧೀನದಲ್ಲಿದ್ದ  ನಮ್ಮ ಪೋಲೀಸ್ ಪಡೆ,  ತಮ್ಮ ಲಾಠಿ ತಿರುಗಿಸುತ್ತಾ ನಮ್ಮವರಿಗೆ ಎಚ್ಚರಿಕೆ ಕೊಡುತ್ತಿದ್ದರು. ಆದರೆ ಈಗ ನಮ್ಮ ಪೋಲಿಸ್ ಪಡೆ, ನಮಗೆ ಯಾವ ಪ್ರತಿಬಂಧವೂ ಇಲ್ಲದೆ ಕೂಗಲು ಸಹಾಯಮಾಡುತ್ತಿದೆ. ಇದಲ್ಲವೇ ನಿಜವಾದ ಸ್ವಾತಂತ್ರ್ಯ. ಒಟ್ಟಿನಲ್ಲಿ  ನಮಗೆ ಸ್ವಾತಂತ್ರ್ಯ ಸಿಕ್ಕಿತು ಅಂದರೆ, ಅದರ ಸರಿಯಾದ ಅರ್ಥವೇನೆಂದು ಹಲವಾರು ನಾಯಕ ಧುರೀಣರು ಅವರದೇ ಆದರೀತಿಯಲ್ಲಿ ಕೊಡುತ್ತಿದ್ದ ವ್ಯಾಖ್ಯಾನಗಳನ್ನು ತಪ್ಪದೆ ಕೇಳುತ್ತಿದ್ದೆವು. ನಮಗಂತೂ ಅದನ್ನು ವಿಶ್ಲೇಷಣೆ ಮಾಡುವಷ್ಟು ಪ್ರಬುದ್ಧತೆ ಇರಲಿಲ್ಲ.
ಶತಮಾನಗಳ ಕಾಲ ದಾಸತ್ವದ ಸಂಲೋಲೆಯಿಂದ ಬಿಡಿಸಿಕೊಂಡ ಭಾವನೆ. ಯಾರ ಹಂಗಿಲ್ಲದೆ ನಮ್ಮದೇಶವನ್ನು ನಮಗೆ ಬೇಕಾದರೀತಿಯಲ್ಲಿ ಆಳಬಹುದು. ನಮಗೆ ಯಾರ ಅಂಕುಶವೂ ಇಲ್ಲ ಎನ್ನುವ ಭಾವನೆಗಳನ್ನು ಬಿಟ್ಟರೆ, ನಮಗೆ ಆಗಿರುವ ಅನುಕೂಲವೇನು, ನಮ್ಮ ಆವಶ್ಯಕತೆಗಳನ್ನು ನಾವೇ ಪೂರೈಸಿಕೊಳ್ಳುವುದಂದರೇನು  ಎನ್ನುವುದನ್ನು ವಿವರವಾಗಿ ಹೇಳಲು ಯಾರಿಗೂ ತಿಳಿಯದು.
ನಮ್ಮದೇಶದಲ್ಲಿ ಆಗ ನಮ್ಮ ಸ್ವದೇಶಿ  ಉದ್ಯಮಗಳೂ ಇನ್ನೂ ಚಾಲನೆಗೆ  ಬಂದಿರಲಿಲ್ಲ. ಗೃಹೋದ್ಯೋಗಗಳಿದ್ದವು. ಬಿರ್ಲಾ, ಟಾಟ, ಮುತಾದ ಸ್ವದೇಶಿ ಬಂಡವಾಳಗಾರರು ಕೆಲವು ಕಾರ್ಖಾನೆಗಳನ್ನು ತೆಗೆದು, ದೇಶಕ್ಕೆ ಬೇಕಾಗುವ ಕೆಲವು ದಿನನಿತ್ಯ ಉಪಯೋಗವಾಗುವ ವಸ್ತುಗಳನ್ನು ತಯಾರುಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಟಾಟ ಕಂಪೆನಿಯ ಪಾತ್ರ, ಅನುಪಮವಾದದ್ದು. ದಿನನಿತ್ಯಬಳಕೆಗೆ ಬೇಕಾಗುವ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮತ್ತು ಅತಿ ಕಡಿಮೆ ಲಾಭಪಡೆದು ದೇಶದ  ಜನರಿಗೆ ನೆರವಾಗುತ್ತಿದ್ದರು. ಉದಾಹರಣೆಗೆ, ಮೈಸಾಬೂನು, ಬಟ್ಟೆ ಸಾಬೂನು, ಉಕ್ಕು, ಸಿಮೆಂಟ್, ಉಡುವ- ಬಟ್ಟೆ, ವಿದ್ಯುಚ್ಛಕ್ತಿ, ಮುಂತಾದ ಜೀವನಾವಶ್ಯಕ ವಸ್ತುಗಳನ್ನು ಅವರು ಉತ್ಪಾದಿಸುವಲ್ಲಿ ಮೊದಲಿಗರಾದರು. ಸಮಾಜದ ಆರೋಗ್ಯದ ಬಗೆಗೆ ಕಾಳಜಿ, ಮತ್ತು  ವಿಜ್ಞಾನದ ಬೆಳವಣಿಗೆಗೆ ಸ್ಥಾಪಿಸಿದ ’ ಇಂಡಿಯನ್  ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್,’ ಸಂಸ್ಥೆ  ಜಮ್ಶೆಶೆಟ್ ಜಿ ಟಾಟ  ’ರವರ ಸೇವೆ ಮತ್ತು ದೂರದೃಷ್ಟಿಗೆ ಸಾಕ್ಷಿಯಾದ ಸಂಗತಿಗಳು ! ಎಲ್ಲವೂ ಇಂಗ್ಲೆಂಡ್ ನಿಂದಲೇಬರಬೇಕೆನ್ನುವ  ಸೊಲ್ಲು ಸ್ವಲ್ಪಸ್ವಲ್ಪವಾಗಿ ಕಡಿಮೆಯಾಗತೊಡಗಿತು !

Comments

Popular posts from this blog

ತಾಯಿಯಂತೆ ಮಗಳು ನೂಲಿನಂತೆ ಸೀರೆ !

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !

Shri. Chitradurga Mahadev Bhatt, Bombay's one of the Great Yoga teachers during 1950s to 1980s !